ಯಕ್ಷಗಾನ ಕಲಾವಿದರಿಗೆ ಮಾಸಾಶನ ನೀಡಿ : ಡಾ.ಬಿ.ಎ.ವಿವೇಕ ರೈ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಒಕ್ಟೋಬರ್ 29 , 2013
|
ಒಕ್ಟೋಬರ್ 29 , 2013
|
ಯಕ್ಷಗಾನ ಕಲಾವಿದರಿಗೆ ಮಾಸಾಶನ ನೀಡಿ : ಡಾ.ಬಿ.ಎ.ವಿವೇಕ ರೈ
ಬೆಂಗಳೂರು :
ಯಕ್ಷಗಾನ ಕಲಾವಿದರು ಕಾಲಿನ ಆಣಿ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಮಾಸಾಶನ ನೀಡುವ ಮೂಲಕ ಅವರತ್ತ ಸರ್ಕಾರ ಗಮನಹರಿಸಬೇಕಿದೆ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಒತ್ತಾಯಿಸಿದ್ದಾರೆ.
ರಂಗಚೇತನ ಸಂಸ್ಕೃತಿ ಕೇಂದ್ರದಿಂದ ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ 'ಡಾ.ಡಿ.ಕೆ.ಚೌಟ-75' ಜನ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಚೌಟರ 'ಪಚ್ಚೆತೆನೆ' ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ಇರುವ ಯಕ್ಷಗಾನ ಕಲಾವಿದರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದರೂ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ಅಂತಹ ಕಲೆ, ಕಲಾವಿದರು ಉಳಿದರೆ ನಾಡು ಉಳಿಯುತ್ತದೆ. ಅಂತಹ ಕಲಾವಿದರಲ್ಲ ಸರ್ಕಾರ ಗಮನಹರಿಸಿ ಸೂಕ್ತ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಸಾಂಸ್ಕೃತಿಕ ಸೂಕ್ಷ್ಮತೆ ಮಾಯ: ಯಾವ ಒಬ್ಬ ರಂಗಕರ್ಮಿ/ ಲೇಖಕ ತಾನು ಕೃಷಿಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಉಳಿಸಲು ಸಾಧ್ಯ. ಆದರೆ, ಇಂದು ಅಂತಹ ಕೃಷಿ ಭೂಮಿಯನ್ನು ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಮಾರಾಟ ಮಾಡುತ್ತಿದೆ. ಇದರಿಂದ ಸಾಂಸ್ಕೃತಿಕ ಸೂಕ್ಷ್ಮತೆಗಳು ಮಾಯವಾಗುತ್ತಿವೆ ಎಂದು ವಿಷಾದಿಸಿದರು.
ಚೌಟ ಸಾಂಸ್ಕೃತಿಕ ನಕಾಶೆ ಸೃಷ್ಟಿಸಿದ್ದಾರೆ: ಒಬ್ಬ ಲೇಖಕನಿಗೆ ಈ ಎಲ್ಲವುಗಳ ಬಗ್ಗೆಯೂ ಇರಿವಿರಬೇಕು. ಸರ್ಕಾರ ಇಂದು ಕಲೆ, ಸಾಹಿತ್ಯ, ಕೃಷಿ ಎಲ್ಲವನ್ನೂ ಬೇರೆ ವಿಭಾಗಗಳನ್ನಾಗಿ ಮಾಡಿ ಒಂದಕ್ಕೊಂದು ಸಂಪರ್ಕ ಇಲ್ಲದಂತೆ ಮಾಡಿದೆ.
ಕೃಷಿಯನ್ನು ಕೇಂದ್ರವಾಗಿರಿಸಿಕೊಂಡವರು ಸಾಹಿತ್ಯ, ರಂಗಭೂಮಿ ಕಟ್ಟಬಹುದು ಎಂಬುದಕ್ಕೆ ಚೌಟ ಅವರು ಉದಾಹರಣೆ. ಎಲ್ಲಾ ವರ್ಗದ ಕಲಾವಿದರನ್ನು ಸೇರಿಸಿಕೊಂಡು ಸಾಂಸ್ಕೃತಿಕ ನಕಾಶೆ ಸೃಷ್ಟಿಸಿದ್ದಾರೆ ಎಂದರು.
ಸಚಿವೆ ಉಮಾಶ್ರೀ ಮಾತನಾಡಿ, ಸಾಮಾನ್ಯರ ಜತೆ ಸಾಮಾನ್ಯರಂತೆ ಇದ್ದು, ರಂಗಭೂಮಿ ಕಟ್ಟಿ ಬೆಳೆಸುವ ಕೆಲಸ ಮಾಡುತ್ತಿರುವ ಚೌಟ ಅವರನ್ನು ಪಡೆದಿರುವ ರಂಗಬೂಮಿ ಕಲಾವಿದರು ಧನ್ಯರು.
ಅವರ ಶುದ್ಧ ಮನಸ್ಸು, ಶ್ರೀಮಂತ ನಡವಳಿಕೆ ಕನ್ನಡದ ಸಾಂಸ್ಕೃತಿಕ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸಲಿ ಎಂದರು.
ಇದೇ ವೇಳೆ ಡಾ.ಡಿ.ಕೆ.ಚೌಟ ದಂಪತಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ನಾಗೇಶ್ ಹೆಗಡೆ, ಸಿ.ಬಸವಲಿಂಗಯ್ಯ, ಹನೂರು ಕೃಷ್ಣಮೂರ್ತಿ, ಕೆ.ಕೆ.ಮಕಾಳಿ, ದು.ಸರಸ್ವತಿ ಅವರನ್ನು ಸನ್ಮಾನಿಸಲಾಯಿತು.
ವಿಧಾನಪರಿಷತ್ ಮಾಜಿ ಸಭಾಪತಿ ಡಾ.ಬಿ.ಎಲ್.ಶಂಕರ್, ಜಯದೇವ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ರಂಗಚೇತನ ಸಂಸ್ಕೃತಿ ಕೇಂದ್ರದ ಲಕ್ಷ್ಮಣ್, ಕೆ.ಎಚ್.ಪುಟ್ಟಸ್ವಾಮಿ, ರಂಗ ಸಂಘಟಕ ಜಿಪಿಒ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.
ಕೃಪೆ : http://www.kannadaprabha.com/
|
|
|